Monday, January 13, 2020

ಬೆಂಗಳೂರು ಬೀದಿ ನಾಯಿಗಳ ಬದುಕು – ಭಾಗ ೨




ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ ಇಂದು ಸುಮಾರು ೫ ಲಕ್ಷ ಬೀದಿ ನಾಯಿಗಳಿವೆ, ಅಂದರೆ ಸುಮಾರು ೨೦ ಜನರಿಗೆ ಒಂದು ಬೀದಿ ನಾಯಿ ಇದೆ. ನಮ್ಮ ಮನೆಯ  ರಸ್ತೆಯನ್ನು ಉದಾಹರಣೆಗೆ ತೆಗೆದುಕೊಂಡರೆ, ಸುಮಾರು ೪೦೦ ಮೀಟರ್‌ ಉದ್ದವಿದೆ, ಸುಮಾರು ೬೦ ಮನೆಗಳಿವೆ, ಹೆಚ್ಚಿನವು ಅಪಾರ್ಟ್ಮೆಂಟುಗಳಾಗಿವೆ, ಸರಾಸರಿ ೧೦-೧೫ ಮಂದಿಗಳಂತೆ ೬೦೦-೯೦೦ ಜನರಿದ್ದಾರೆ, ಸರಾಸರಿಯ ಪ್ರಕಾರ ಇವರ ಸುತ್ತ ೩೦-೪೫ ಬೀದಿ ನಾಯಿಗಳರ ಬಹುದಾಗಿದೆ, ಆದರೆ ನಮ್ಮಲ್ಲಿ ೧೦-೨೦ ಬೀದಿ ನಾಯಿಗಳ ಓಡಾಟ ಯಾ ಮಲಗಾಟ ಇದ್ದು ಸರಾಸರಿಗಿಂತ ಕಡಿಮೆಯೇ ಇದೆ, ಯಾಕೆ ಇದು ಹೀಗೆ?

ನಮ್ಮ ಬೆಂಗಳೂರನ್ನು ತೆಗೆದುಕೊಂಡರೆ, ಅಲ್ಲಿನ ಬಡಾವಣೆಗಳಲ್ಲಿ ಬೇರೆ ಬೇರೆ ವಿಧಗಳಿವೆ. ವಿಧಾನಸೌಧವನ್ನು ಕೇಂದ್ರವನ್ನಾಗಿ ಇಟ್ಟುಕೊಂಡರೆ, ಸುಮಾರು ೧೦ ಕಿಲೋಮೀಟರುಗಳ ತ್ರಿಜ್ಯದಲ್ಲಿ ಕೇಂದ್ರ ವ್ಯವಹಾರ ವಲಯವಿದೆ. ಆ ನಂತರ ಇನ್ನೊಂದು ಹತ್ತು ಕಿಲೋಮೀಟರುಗಳ ತನಕ ಜನರ ವಾಸ್ತವ್ಯವೇ ಮುಖ್ಯವಿದ್ದರೂ ಅಲ್ಲಿ ವ್ಯವಹಾರ ಕೇಂದ್ರಗಳು ಬೆಳೆಯುತ್ತಿವೆ. ಇಪ್ಪತ್ತು ಕಿಲೋಮೀಟರುಗಳ ತ್ರಿಜ್ಯದ ನಂತರ ನಗರದ ಹೊರವಲಯಗಳಿವೆ, ಇಲ್ಲಿ ವಾಸ್ತವ್ಯ ಹಾಗೂ ವ್ಯವಹಾರಗಳು ಏಕ ಕಾಲದಲ್ಲಿ ಬೆಳೆಯುತ್ತಿವೆ. ಅಪವಾದವೆಂಬಂತೆ ಅಲ್ಲಲ್ಲಿ ನಗರದ ಸಣ್ಣ ಕೇಂದ್ರಗಳು ಸ್ಥಾಪಿತವಾಗಿದ್ದು, ಮೇಲೆ ಹೇಳಿರುವ ಹರಡುವಿಕೆಯಲ್ಲಿ ಸ್ವಲ್ಪ ವ್ಯತ್ಯಯ ಬರುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ಕೇಂದ್ರ ವ್ಯವಹಾರ ವಲಯಗಳಲ್ಲಿ ಬೀದಿನಾಯಿಗಳು ಕಡಿಮೆ ಇರುತ್ತವೆ, ಮಧ್ಯದ ವಾಸ್ತವ್ಯ ವಲಯಗಳಲ್ಲಿ ಸ್ವಲ್ಪ ಹೆಚ್ಚು, ಹೊರವಲಯದಲ್ಲಿ ಅತೀ ಹೆಚ್ಚು. ಇದಕ್ಕೆ ಮತ್ತೆ ಅಪವಾದಗಳಲ್ಲಿರುತ್ತವೆ. ಉದಾಹರಣೆಗೆ ಲಾಲ್‌ ಬಾಗ್‌ ಕೇಂದ್ರ ವ್ಯವಹಾರ ವಲಯದ ತುದಿಯಲ್ಲಿ ಇದ್ದರೂ ಕೂಡಾ ಇಲ್ಲಿನ ಬೀದಿನಾಯಿಗಳ ಸಂಖ್ಯೆ ನಗರದ ಹೊರವಲಯದ ಸರಾಸರಿಯಲ್ಲಿ ಇವೆ, ಇದಕ್ಕೆ ಕಾರಣ ಇಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ಅವಕಾಶ ಮತ್ತು ಬರುವ ಪ್ರವಾಸಿಗರು ಹಾಗೂ ಬೆಳಗಿನ ವ್ಯಾಯಾಮ ನಡೆಗೆ ಬರುವವರ ಉದಾರತೆಯಲ್ಲಿ ಸಿಗುವ ಆಹಾರ ವಸ್ತುಗಳು. ನಗರ ಕೇಂದ್ರದಿಂದ ತ್ರಿಜ್ಯ ಹೆಚ್ಚಿದಂತೆ ಮಾನವ ವಾಸ್ತವ್ಯದ ನೆರವು ಹೆಚ್ಚುವುದರಿಂದ, ನಾಗರಿಕ ಕಸ ಎತ್ತುವ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಹೆಚ್ಚುವುದರಿಂದ ನಾಯಿಗಳ ಸರಾಸರಿಯೂ ಹೆಚ್ಚುತ್ತಾ ಹೋಗುತ್ತದೆ.

ನಮ್ಮ  ಬಡಾವಣೆಯು ಕೇಂದ್ರ ವ್ಯವಹಾರ ವಲಯಕ್ಕೆ ತಾಗಿಕೊಂಡಿರುವ ವಾಸ್ತವ್ಯ ವಲಯವಾಗಿದ್ದರೂ ಮೊದಮೊದಲು ಇಲ್ಲಿನ ವ್ಯವಸ್ಥೆ ಹೊರವಲಯದಂತೇ ಇತ್ತು. ಸುಮಾರು ೧೯೯೯ರ ನಂತರವೇ ನಮ್ಮ ವಾಸ್ತವ್ಯ ಜಾಗಗಳು ರೆವಿನ್ಯೂ ಖಾತೆಯಿಂದ ನಗರಪಾಲಿಕೆ ಖಾತೆಗೆ ಮಾರ್ಪಾಟಾದವು, ಅಲ್ಲಿನ ತನಕ ನಮ್ಮ ಬಡಾವಣೆ ಮಾಡುವಾಗ ಅಂದರೆ ಅದಕ್ಕಿಂತ ಸುಮಾರು ೧೫-೨೦ ವರ್ಷಗಳ ಹಿಂದಿನ ಕೆಂಪು ಮಣ್ಣಿನ ರಸ್ತೆಗಳೇ ಇದ್ದುವು, ದಿನವಿಡೀ ಇವುಗಳ ಮೇಲಿನ ವಾಹನ ಓಡಾಟಗಳಲ್ಲಿ ಹೊರಡುವ ಕೆಂಪು ಧೂಳಿಯನ್ನು ಮೂಗು ಬಾಯಿಯ ಮೂಲಕ ಸೇವಿಸಿ ನಾವು ಗಟ್ಟಿಯಾಗುತ್ತಲೇ ಬಂದಿದ್ದೆವು. ನಮಗೆ ಡಾಂಬರಿನ ರಸ್ತೆ ಬರಲು ೨೦೦೨ರ ವರೆಗೆ ಕಾದು ನೋಡಬೇಕಾಯಿತು. ಅಲ್ಲಿಯ ತನಕ ಬೀದಿಯ ಅಲ್ಲಲ್ಲಿ ಕಡಿಮೆ ಅಧಿಕೃತ, ಹೆಚ್ಚು ಅನಧಿಕೃತ ಕಸದ ತೊಟ್ಟಿಗಳಿದ್ದವು. ನಗರ ಪಾಲಿಕೆ ಇಟ್ಟಿರುವ ಒಂದು ಸಿಮೆಂಟ್ ಸಿಲಿಂಡರೇ ಅಧಿಕೃತ ಕಸದ ತೊಟ್ಟಿಯಾದರೆ, ಬೇಲಿ ಇರಲಿ, ಇಲ್ಲದಿರಲಿ, ಖಾಲಿ ಸೈಟುಗಳು, ಟ್ರಾನ್ಸ್‌ ಫಾರ್ಮರುಗಳ ಬುಡ, ನಾಲ್ಕು ರಸ್ತೆ ಸೇರುವ ಮೂಲೆಗಳು, ಒಮ್ಮೆಲೇ ರಸ್ತೆ ಸ್ವಲ್ಪ ಅಗಲವಾದರೆ ಸಿಗುವ ಹೆಚ್ಚುವರಿ ಜಾಗ ಇತ್ಯಾದಿಗಳೇ ಅನಧಿಕೃತ ಕಸದ ತೊಟ್ಟಿಗಳಾಗಿದ್ದವು. ಅಧಿಕೃತ ಕಸದತೊಟ್ಟಿಗಳು ತುಂಬಿ ಹರಿದು, ಜನರು ಆಟಗಾರನ ಕಸುವು ಹಾಗೂ ನಿಖರತೆ ಇಲ್ಲದೇ ಸುಮಾರು ೨೦ ಅಡಿಗಳ ದೂರದಿಂದಲೇ ಎಸೆಯುವ ಕಸದ ಚೀಲಗಳು ಎಲ್ಲೆಲ್ಲೋ ಬಿದ್ದು ಎರಡನೇ ಮಹಾಯುದ್ಧ ಈಗ ತಾನೇ ನಡೆದುಹೋಗಿದೆ ಎಂಬಂತಿರುತ್ತಿದ್ದವು. ಈ ಕಸದ ತೊಟ್ಟಿಗಳೇ ಬೀದಿನಾಯಿಗಳಿಗೆ ವರದಾನವಾಗಿದ್ದವು. ಅವುಗಳ ಹೊಟ್ಟೆ ತಂಬಿ ಇನ್ನೂ ಆಹಾರ ಮಿಕ್ಕುತ್ತಿತ್ತು. ಹಾಗಾಗಿ ಆಹಾರದ ಕುರಿತಾಗಿ ಅವಕ್ಕೆ ಒಂದು ರೀತಿಯ ಅಸಡ್ಡಯೇ ಇತ್ತು. ಹಗಲಿಡೀ ಅಲ್ಲಲ್ಲಿ ಬಿದ್ದುಕೊಂಡು, ರಾತ್ರಿ ಮಾತ್ರ ಆಹಾರ ತಿಂದು ಸೊಕ್ಕಿ ನಿರ್ಜನ ರಸ್ತೆಯಲ್ಲಿ ಗಸ್ತು ತಿರುಗುತ್ತಾ ಅಪರೂಪಕ್ಕೆ ಹೋಗುವ ವಾಹನ ಗಾಲಿಗಳ ವಿರುದ್ಧ ಯುದ್ಧ ಸಾರಿ ಅಟ್ಟಿಸಿಕೊಂಡು ಬಂದು ಗಲಾಟೆ ಮಾಡುತ್ತಿದ್ದವು. ರಾತ್ರಿ ಮನೆಯ ಹತ್ತಿರದ ವೃತ್ತಗಳಲ್ಲಿ ಒಮ್ಮೆಲೇ ೨೦ ನಾಯಿಗಳು ಸೇರಿರುವುದನ್ನು ನೋಡುವ ಭಾಗ್ಯ ೨೦೦೩ರ ವರೆಗೂ ನನಗಿತ್ತು, ಎಲಾ ನಾಯಿಗಳನ್ನು ಲೆಕ್ಕ ಮಾಡುತ್ತಾ ವಾಹನ ಯಾಕೆ ಚಲಾಯಿಸಿದ ಎಂದು ನೀವು ಕೇಳಬಹುದು, ಮುಂದೆ ಉತ್ತರ ಸಿಕ್ಕೇ ಸಿಗುತ್ತದೆ.

ನಾಯಿಗಳು ರಾತ್ರಿ ವಾಹನದ ಹಿಂದೆ ಬೊಗಳುತ್ತಾ ಬಂದರೆ ರಸ್ತೆಯಲ್ಲಿ ನಡೆಯುವರು ಹಾಗೂ ದ್ವಿಚಕ್ರವಾಹನ ಸವಾರರು ಕಚ್ಚುವುದೆಂದು ಹೆದರುವುದಿದೆ, ಹೆದರುವುದು ಅನಾವಶ್ಯಕ. ನಾಯಿಗಳ ದ್ವೇ಼ಷ ನಿಮ್ಮ ಮೇಲಲ್ಲ, ನಿಮ್ಮ ವಾಹನದ ಮೇಲಲ್ಲ, ಬರೇ ವಾಹನದ ಚಕ್ರಗಳ ಮೇಲೆ.  ಒಮ್ಮೆ ವಾಹನ ನಿಲ್ಲಿಸಿ ನೋಡಿ, ಚಕ್ರಗಳತ್ತ ಬೊಗಳುತ್ತಾ ಇರುತ್ತವೆ. ಇದಕ್ಕೆ ಕಾರಣ, ಎಷ್ಟೋ ಬೀದಿ ನಾಯಿಗಳು ವಾಹನ ಚಕ್ರಗಳ ಅಡಿಯಲ್ಲಿ ಸಿಕ್ಕು ಸತ್ತಿವೆ ಇಲ್ಲಾ ಮಾರಣಾಂತಿಕವಾಗಿ ಗಾಯಗೊಂಡಿವೆ. ರಾತ್ರಿ ನಾಯಿಗಳ ದರ್ಬಾರು ನಡೆಯುತ್ತಿರುವಾಗ, ಹಿಂದಿನ ಕಹಿ ನೆನಪುಗಳ ಮಧ್ಯೆ ಒಂದು ಧಿಕ್ಕಾರದ ಘೋಷಣೆಯನ್ನು ಕೂಗಿ ತಮ್ಮ ತಮ್ಮ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳುವ ಅವುಗಳ ಪ್ರಾಮಾಣಿಕ ಪ್ರಯತ್ನವಷ್ಟೇ.  ಅಪರೂಪಕ್ಕೆ ನಾಯಿಗಳು ಮನುಷ್ಯರನ್ನು ಕಚ್ಚುತ್ತವೆ, ಎರಡು ಕಾರಣಗಳಿಗಾಗಿ. ಒಂದು ಎದುರಿಗಿನ ಮನುಷ್ಯ ಹೆದರಿದರೆ ಆತ ತಮಗಿಂತ ಕಡೆ ಎಂಬ ನಿರ್ಧಾರದಲ್ಲಿ, ಇನ್ನೊಂದು ತಮ್ಮಷ್ಟೇ ಉದ್ದಕ್ಕಿರುವ ಮಕ್ಕಳು ಸುಲಭ ಧಾಳಿಗೆ ಸಿಗುವರೆಂದು. ಅದೂ ಇವೆರೆಡು ಕಾರಣಗಳಿದ್ದರೂ ನಾಯಿಗಳು ಹಸಿವು ಅತಿಯಾಗಿದ್ದರೆ ಮಾತ್ರ ಮನುಷ್ಯತ್ವದ ಲೆಕ್ಕಾಚಾರವನ್ನು ಮೀರಿದ ಅವುಗಳ ಪಶುತ್ವ ಮೆರೆಯುತ್ತದೆ. ಅದಕ್ಕಾಗಿಯೇ ನನ್ನ ವಾದ, ಬೀದಿನಾಯಿಗಳನ್ನು ಹುಟ್ಟಲು ಅವಕಾಶ ಕೊಡಬೇಡಿ, ಹುಟ್ಟಿಸಿದ ಮೇಲೆ ಆಹಾರ ಕೊಡದೇ ಹಸಿವಿನಲ್ಲಿ ಬಿಡಬೇಡಿ ಎಂಬುದಾಗಿ.

೨೦೦೨ರ ನಂತರ ನಮ್ಮಲ್ಲಿ ಕೆಂಪು ರಸ್ತೆ ಹೋಗಿ ಕಪ್ಪು ಡಾಂಬರ್‌ ರಸ್ತೆ ಬಂದಾಗ ನಾವೆಲ್ಲಾ ಇನ್ನು ಕೆಂಪು ಧೂಳಿಯನ್ನು ಮನೆಯಲ್ಲಿ ಒರೆಸುವ ಕೆಲಸ ಕಡಿಮೆ ಎಂದು ಕುಪ್ಪಳಿಸಿದೆವು. ಆದರೆ ಬಡಾವಣೆ ಬೆಳೆದು ಮನೆಗಳು ಹೆಚ್ಚಿ ವಾಹನ ಓಡಾಟ ಅತಿಯಾಗಿ ಬೇರೆ ಬಣ್ಣದ ಧೂಳಿ ಒಂದೆಡೆಯಾದರೆ ಮನೆಗಳನ್ನು ಕಟ್ಟುವಾಗ ಹರಡುವ ಮಣ್ಣು ಹಾಗೂ ಸಿಮೆಂಟಿನ ಧೂಳಿಯು ವಾಹನ ಹೋಗುವಾಗ ಹರಡುತ್ತಾ ಧೂಳನ್ನು ತಿನ್ನುತ್ತಾ ನಾವು ಇನ್ನೂ ಗಟ್ಟಿಯಾಗುತ್ತಲೇ ಬಂದೆವು. ಇಂದಿಗೂ ನಾನು ಬರೆಯಲು ಉಪಯೋಗಿಸುವ ಮೇಜನ್ನು ಎರಡು ದಿನ ಒರೆಸದಿದ್ದರೆ, ಮೂರನೇ ದಿನ ತೆಳ್ಳಗಿನ ಧೂಳಿನ ಮೇಲೆ ಚಿತ್ತಾರಗಳನ್ನು ಬಿಡಿಸುವ ಭಾಗ್ಯ ನನ್ನದಿರುತ್ತದೆ. ನಾನು ಮಾತ್ರ ಮನೆಯ ಸುತ್ತ ಕಾಡನ್ನು ಹೆಚ್ಚಿಸಿ ಈ ಧೂಳನ್ನು ಸುಮಾರು ಕಡಿಮೆ ಮಾಡಿಕೊಂಡು ಈಗ ಚಿತ್ತಾರಗಳನ್ನು ಬರೆಯಲು ಒಂದು ವಾರವೇ ಕಾಯಬೇಕಾಗುತ್ತದೆ ಅನ್ನಿ.

೨೦೦೨ರಲ್ಲಿ ಡಾಂಬರ್‌ ರಸ್ತೆ ಬಂದ ನಂತರ, ೨೦೦೩ರಲ್ಲಿ ಬೆಂಗಳೂರು ನಗರ ಪಾಲಿಕೆಯವರು ವಿಶ್ವ ಬ್ಯಾಂಕಿನ ಸಾಲದ ಆಧಾರದಲ್ಲಿ (ಸುಮಾರು ರೂಪಾಯಿ ೩,೦೦೦ಕೋಟಿಗಳ ವೆಚ್ಚ) ಬೆಂಗಳೂರಿನ ಮೂಲೆಮೂಲೆಗಳ್ಲಿ ಸ್ಯಾನಿಟರಿ ಪೈಪುಗಳನ್ನು ಹಾಕಿಸುವ ಯೋಜನೆ ಬಂತು, ಅಲ್ಲಿಯವರೆಗೆ ನಮ್ಮಂತಹ ರೆವಿನ್ಯೂ ಬಡಾವಣೆಗಳಲ್ಲಿ ಹೌದೋ ಅಲ್ಲವೋ ಎಂಬಂತೆ ಕೆಲಸ ಮಾಡುವ, ಆಗಾಗ ತುಂಬಿ ಹರಿಯದೇ ಇರುವ, ಸುಮಾರು ೨೫ ವರ್ಷಗಳ ಹಿಂದಿನ ಕೆಲವೇ ಮನೆಗಳಿಗೆ ಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಹಾಕಿದ ಸಪೂರ ಮಣ್ಣಿನ ಪೈಪುಗಳೇ ಇದ್ದು, ಎಷ್ಟೋ ಮನೆಯವರು ತುಂಬಿ ಹರಿಯದಾಗ ಚರಂಡಿಗೇ ಎಲ್ಲಾ ಬಿಟ್ಟು ನಾತಗಳ ಮಧ್ಯೆ ನಾಥನನ್ನು ಬೇಡುತ್ತಾ ಸಾಗುವ ಪಾಡು ನಮ್ಮದಿತ್ತು. ಈ ಯೋಜನೆಯ ಆದ ಕೂಡಲೇ ಸುಮಾರು ೨೦೦೫ರ ಹಾಗೆ ಸಾರ್ವಜನಿಕ ತಿಪ್ಪೇಗುಂಡಿಗಳು ಮಾಯವಾಗತೊಡಗಿದವು, ಕಾರಣ ನಗರಪಾಲಿಕೆಯವರು ಬಂದು ಕಸವನ್ನು ಎತ್ತುವುದೂ ಸಾಮಾನ್ಯವಾಗತೊಡಗಿತು. ಈ ಮಧ್ಯೆ ಖಾಲಿ ಸೈಟುಗಳೂ ಮಾಯವಾಗತೊಡಗಿದವು. ನಮ್ಮ ಬಡಾವಣೆಯಲ್ಲಿ ಬೀದಿನಾಯಿಗಳ ಸುವರ್ಣಯುಗ ಮುಗಿಯುತ್ತಾ ಬಂದಿತು. ಆದರೆ ನಮಗಿಂತ ಕಿಲೋಮೀಟರುಗಳ ದೂರದ ಹೊರವಲಯಕ್ಕೆ ಈ ಸುವರ್ಣಯುಗವು ವರ್ಗಾಯಿತವಾಗಿದೆ ಎಂಬಲ್ಲಿ ಯಾವುದೇ ಸಂಶಯ ಬೇಡ.

ಆದರೂ ನಮ್ಮ ಬಡಾವಣೆಯಲ್ಲಿ ೩೦ ಪ್ರತಿಶತ ನಾಯಿಗಳು ಉಳಿದವು. ಕಾರಣ, ೨೫-೫೦ ವರ್ಷಗಳಿಂದ ಬೀದಿಗೇ ಕಸ ಎಸೆಯುವ ಮಂದಿ, ಈ ಸ್ವಚ್ಛಂದದ ಆಟವನ್ನು ಬಿಡಲಾರರಾದರು. ಬೆಳಿಗ್ಗೆ ವಾಕಿಂಗ್‌ ಹೋಗುವಾಗ ತಮ್ಮದಲ್ಲದ ಯಾವುದೋ ರಸ್ತೆಯ ಮೂಲೆಯಲ್ಲಿ ಕಸ ಎಸೆಯುವ ಕ್ರೀಡೆಯನ್ನು ಬಿಡಲಾಗದವರಾದರು. ಮನೆಯಲ್ಲಿ ಇಬ್ಬರೂ ಕೆಲಸಕ್ಕೆ ಹೋಗುವರಾದರೆ, ಕಸದ ಮಂದಿ ಬಂದಾಗ ಕಸ ಕೊಡಲು ಇರುವುದಿಲ್ಲ, ಆದರೆ ತಮ್ಮ ಮನೆಗಳ ಮುಂದೆಯೇ ಕಸ ಇಟ್ಟುಹೋಗುವುದು ಸಲ್ಲ ಎಂದು ಎರಡು, ಮೂರು, ನಾಲ್ಕು ಚಕ್ರಗಳಲ್ಲಿ ಕಸದ ಚೀಲವನ್ನು ಹೊತ್ತು ಚಕ್ಕನೇ ಎಸೆದು ಹೋಗುವ ಅಪೂರ್ವ ಕ್ರೀಡೆ ಈಗಲೂ ನಡೆಯುತ್ತಿದೆ. ಕೆಳಗಿನ ಬಡಾವಣೆಯವರು ಮೇಲಿನ ನಮ್ಮ ಬಡಾವಣೆಗೆ ಕಸದವರು ಬರುವುದು ಹೆಚ್ಚು ಬಾರಿ ಎಂದು ನಾಲ್ಕು ರಸ್ತೆ ಸೇರುವಲ್ಲಿ ಹಾಕಿ ಹೋಗುವುದು ಗುಡ್ಡೆಗಳಾಗಿ, ಬೀದಿ ನಾಯಿಗಳ ಆಶಾವಾದಕ್ಕೆ ಇಂದಿಗೂ ಯಾವುದೇ ತೊಡಕಾಗಿಲ್ಲ. ರಾತ್ರಿ ದರ್ಬಾರಿನಲ್ಲಿ ಪ್ರತೀ ಕಸದ ಚೀಲವನ್ನು ಸೀಳಿ ಒಳಗಿದ್ದುದನ್ನು ತಿನ್ನುವ ಗಡಿಬಿಡಿಯಲ್ಲಿ ಈ ಕಸದ ಮೂಟೆಗಳು ಸುಮಾರು ೫೦ ಅಡಿಗಳ ತನಕ ಹರಡಿ, ಅದರೊಳಗದ್ದದ್ದೂ ಎಲ್ಲಾ ಕಡೆ ಬಿಕ್ಕಿ, ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ನಮ್ಮ ರಸ್ತೆ ವೈಭವಗಳು ಈಗಲೂ ಅಲ್ಲಲ್ಲಿ ಮುಂದುವರೆಯುತ್ತಿದೆ. ಬೆಳಿಗ್ಗೆ ಪೇಪರ್‌ ಪಡೆಯಲು ಗೇಟ್‌ ಹತ್ತಿರ ಬಂದಾಗ, ನಮ್ಮ ಮನೆಯ ಸುತ್ತ  ನಾಯಿಗಳು ಹರಿದು ತಿಂದು ಉಳಿದ ಸಣ್ಣ ಮಕ್ಕಳ ಡೈಪರುಗಳು (ತಾತ್ಕಾಲಿಕ ಒಳಚಡ್ಡಿಗಳು) ಹರಡಿದುದ ನೋಡಿ, ನಗುವುದೂ ಅಳುವುದೂ ಎರಡೂ ಸಾಧ್ಯವಾಗದೇ, ಎಲ್ಲೆಂದರಲ್ಲಿ ಕಸ ಎಸೆಯುವ ನಾಯಿಗಳಿಂತ ಕಡೆಯಾದ ಈ ಮನುಷ್ಯರ ಮಧ್ಯೆ ಈ ನಾಯಿಗಳಿಗೆ ಊಟವಿಟ್ಟು ಅವನ್ನು ಮೇಲೆತ್ತುವುದೇ ಲೇಸೆನ್ನಿಸುತ್ತದೆ.

ನಾವೀಗ ನಾಯಿಗಳ ಸುವರ್ಣಯುಗಕ್ಕೆ ವಾಪಾಸಾಗೋಣ. ನಮ್ಮ ಮಕ್ಕಳೂ ಸಣ್ಣವರಿದ್ದರು, ಪ್ರತೀ ಬಾರಿಯ ಕಾರಿನ ಪ್ರಯಾಣದ ಸಮಯವೇ ನನಗೆ ಅವರೊಂದಿಗೆ ಆಡಿ ಹಾಡುವುದೇ ಸಮಯದ ಸದುಪಯೋಗವಿತ್ತು. ಇತ್ತ ರಸ್ತೆಯ ಮೇಲೆ ಕಣ್ಣಿಟ್ಟೇ ನನ್ನ ಆಟಗಳು ನಡೆಯಬೇಕಿತ್ತು. ರಸ್ತೆಯನ್ನು ನೋಡುತ್ತಾ ಹೋಗುವಾಗ, ಅಲ್ಲಲ್ಲಿ ನಾಯಿಗಳು ಇಲ್ಲದೇ, ಒಮ್ಮೆಲೇ ಹೆಚಾಗುವುದನ್ನೂ ಗಮನಿಸಿದ್ದೆ, ಹಗಲಿಗಿಂತ ರಾತ್ರಿ ನಾಯಿಗಳ ಸಂತೆ ಹೆಚ್ಚುವುದನ್ನೂ ನೋಡಿದೆ. ಹೀಗೆ ದೇಶ ಮತ್ತು ಕಾಲ ಬದಲಾದಂತೆ ನಾಯಿಗಳ ಸಂಖ್ಯೆ ಬದಲಾಗುವುದೇ ಒಂದು ಆಟದ ಅವಕಾಶವಾಯಿತು. ನಮ್ಮ ಕಾರು ಒಂದು ಕಡೆಯಿಂದ ಹೊರಟು ಇನ್ನೊಂದು ಕಡೆ ತಲುಪುವಾಗ ಸುಮಾರು ೫-೧೫ ಕಿಲೋಮೀಟರಗುಳ ದಾರಿಯಲ್ಲಿ ಎಷ್ಟು ನಾಯಿಗಳು ಸಿಗುತ್ತವೆ ಎಂಬ ಅಂದಾಜು ಹಾಕಿ, ಯಾರ ಅಂದಾಜು ವಾಸ್ತವಕ್ಕೆ ಅತೀ ಹತ್ತಿರವಾಗುತ್ತದೆ ಎಂಬುದೇ ನಾವಾಡುವ ಆಟ. ಒಬ್ಬ ಮಗಳು ರಸ್ತೆಯ ಒಂದು ಬದಿ ನೋಡುತ್ತಾ ಹೋಗಬೇಕು, ಇನ್ನೊಂದು ಮಗಳು ರಸ್ತೆಯ ಇನ್ನೊಂದು ಬದಿ ನೋಡಬೇಕು, ನಾನೋ ೨೦-೨೦ರ ದೃಷ್ಟಿಯ ನನ್ನದೇ ನೋಟದಲ್ಲಿ ಅವರು ತಪ್ಪಿಸಿಕೊಂಡದ್ದನ್ನೂ ನೋಡಲು ಯೋಗ್ಯನಾಗಿದ್ದೆ. ಕೆಲವೊಮ್ಮೆ ಬರೇ ವ್ಯವಹಾರ ಕೇಂದ್ರಗಳ ವಲಯದಲ್ಲಿ ನಾಯಿಗಳು ಲೆಕ್ಕಕ್ಕೆ ಸಿಗದೇ ಒಮ್ಮೆಲೇ ಒಂದು ದೊಡ್ಡ ಕಸದ ತೊಟ್ಟಿಯ ಸುತ್ತ ೧೫-೨೦ ನಾಯಿಗಳು ಧುತ್ತನೇ ಸಿಕ್ಕಿ ಸರಿಯಾಗಿ ಲೆಕ್ಕ ಮಾಡುವ ಮೊದಲೇ ಕಾರು ಮುಂದೆ ಹೋಗಿ ನಮ್ಮ ನಮ್ಮ ಸೂರ್ಗೋಳಿ ಲೆಕ್ಕಗಳ ಸಮನ್ವಯದ ಸಂವಾದ ನಡೆಯುತ್ತಿರುವಾಗಲೇ ಮತ್ತೊಂದು ನಾಯಿಗಳ ಸಮ್ಮೇಳನ ಎದುರಾಗಿ ಕಾರಿನೊಳಗಿನ ಎಲ್ಲರ ಇಂದ್ರಿಯಗಳ ಕೆಲಸವು ತಾರಕಕ್ಕೇರಿ ದಾರಿ ನಡೆದುದೇ ಗೊತ್ತಾಗುತ್ತಿರಲಿಲ್ಲ. ರಾತ್ರಿ ಪ್ರಯಾಣವಾದರೆ, ಹತ್ತು ಗಂಟೆಯ ನಂತರ ನಾಯಿಗಳ ಮೆರವಣಿಗೆ ಹೊರಡುವುದರಿಂದ ಆಯಾ ಬದಿಯ ಕಿಟಕಿಯವರಿಗೆ ಲೆಕ್ಕ ಮಾಡುವುದೇ ಕಷ್ಟವಾಗಿ, ನಾನು ಇಬ್ಬರ ಲೆಕ್ಕವನ್ನೂ ಸರಿಮಾಡುವತ್ತ ಕಾರ್ಟೂನು ಕ್ಯಾರೆಕ್ಟರಿನವ ಕಣ್ಣು ಹೊರಳಿಸಿದಂತೆ ಹೊರಳಿಸುತ್ತಾ ಹೋಗಿ, ಯಾವುದೇ ಆಕ್ಸಿಡೆಂಟು ಆಗದೇ ಇರುವುದೇ ದೇವರ ಅಸ್ತಿತ್ವಕ್ಕೆ ಪುರಾವೆಯೇ ಎಂದು ಪ್ರಶ್ನಿಸುವಂತಾಯಿತು. ರಾತ್ರಿ ಪ್ರಯಾಣದಲ್ಲಿ ಹಗಲು ಲೆಕ್ಕಾಚಾರದವರ ನಾಯಿಗಳ ಅಂದಾಜು ನಗೆಪಾಟಲಿಗೆ ಈಡಾದರೆ, ಈ ಸೋಲಿನ ಕಾರಣ ಮುಂದಿನ ಹಗಲಿನಲ್ಲಿ ರಾತ್ರಿಯ ಲೆಕ್ಕವಿಟ್ಟವರು ಮತ್ತೆ ಸೋತು ಅಂದಾಜು ಮತ್ತು ವಾಸ್ತವಗಳ ಮಧ್ಯೆ ಜೀವನವನ್ನು ಆಟದಂತೆ ಮುನ್ನಡೆಸಬೇಕೆನ್ನುವ ಪಾಠವಂತೂ ನಮ್ಮ ಮಕ್ಕಳಿಗೆ ಗಟ್ಟಿಯಾಗುತ್ತಾ ಹೋಯಿತು. ಇತ್ತ ಸುಮಾರು ಹತ್ತು ಕಿಲೋಮೀಟರುಗಳ ದೂರದಲ್ಲಿ ೧೫೦ಷ್ಟು ಸಿಗುವ ನಾಯಿಗಳ ಸಂಖ್ಯೆ ಕ್ರಮೇಣ ಹತ್ತಿಪ್ಪತ್ತಕ್ಕೂ ಕಡಿಮೆ ಇಳಿದು ಆಟದ ಮಜ ಕಡಿಮೆಯಾಗತೊಡಗಿತು. ಹಾಗಾಗಿ ಬದಲಿಗೆ ದನಗಳ ಸಂಖ್ಯೆ, ಒಂದೇ ಮಾದರಿಯ ಕಾರುಗಳ ಸಂಖ್ಯೆ, ರಾತ್ರಿ ಹೋಗುವ ಒಕ್ಕಣ್ಣಿನ ಕಾರುಗಳ ಸಂಖ್ಯೆ (ಎದುರಿನ ಒಂದು ದೀಪದ ಬಲ್ಬ್‌ ಕೆಲಸ ಮಾಡದಿರುವುದು) ಹೀಗೆ ಬೇರೆ ಬೇರೆ ಅಂಕಿಅಂಶಗಳ ಸುತ್ತ ಈ ಅಂದಾಜುಗಳ ಆಟ ಸ್ವಲ್ಪ ಕಾಲ ಮುಂದುವರೆದರೂ ಈ ನಾಯಿಗಳು ಕೊಟ್ಟ ಮಜ ಬೇರೆಯದು ಕೊಡಲಾಗಲಿಲ್ಲ. ಇತ್ತ ನನ್ನ ಮಕ್ಕಳು ಈ ಆಟದಲ್ಲಿ ನನ್ನನ್ನೇ ಸೋಲಿಸುವಷ್ಟು ಗಟ್ಟಿಯಾಗುವಾಗ ಅವರನ್ನು ಹೆದ್ದಾರಿಯ ಮಾರ್ಗದಲ್ಲಿ ಇದೇ ಆಟಕ್ಕೆ ಎಳೆದೆ. ಬೆಂಗಳೂರಿನ ರಸ್ತೆಯ ಲೆಕ್ಕಾಚಾರಕ್ಕೆ ವಿರುದ್ಧವಾದ ಅಲ್ಲಿನ ಲೆಕ್ಕಾಚಾರ, ಹೆಚ್ಚಿನ ವೇಗದಲ್ಲಿ ಕಾರು ಹೋಗುವುದರಿಂದ ನಾಯಿಗಳ ಗುಂಪೇ ಸಿಕ್ಕರೆ ಲೆಕ್ಕವೇ ಅಡಿಮೇಲಾಗುವುದು, ಹೆದ್ದಾರಿಯ ಅತಿವೇಗದಲ್ಲಿ ಕಣ್ಣು ಹಾಯಿಸುವ ಅಪಾಯ ಬೇಡವೆಂದು ಎರಡು ಬದಿಗಳ ಕಿಟಕಿಗಳ ಮೂಲಕ ಮಕ್ಕಳು ಕೊಡುವ ಲೆಕ್ಕವೇ ಅಂತಿಮವಾಗಿ ಒಬ್ಬರನ್ನೊಬ್ಬರು ನಂಬುವುದು, ನಂಬುವಂತೆ ಬದುಕುವುದು ಗಟ್ಟಿಯಾಗುತ್ತಾ ಹೋಯಿತು. ಮೊದಮೊದಲು ಹೆದ್ದಾರಿಯಲ್ಲಿ ಬೇರೆಯೇ ಅಂದಾಜು ಬೇಕಾದ ಕಾರಣ ನಾನೇ ಗೆಲ್ಲುತ್ತಾ ಹೋದರೂ ಕ್ರಮೇಣ ನನ್ನ ಮಕ್ಕಳಿಗೇ ನಾವಿಬ್ಬರೂ ದೊಡ್ಡವರು ಸೋಲತೊಡಗಿದ್ದು ಖುಷಿಯನ್ನೇ ಕೊಟ್ಟಿತು. ಅಪ್ಪ ಅಮ್ಮರನ್ನೇ ಪದೇಪದೇ ಸೋಲಿಸಲು ಸಾಧ್ಯ ಎಂಬುದು ಗಟ್ಟಿಯಾದ ಮೇಲೆ ಮಕ್ಕಳಿಗೂ ಈ ಆಟದ ಮಜ ಕಡಿಮೆಯಾಗತೊಡಗಿತು, ಕಿವಿಗೆ ಹೂವಿಟ್ಟಂತೆ ಫೋನಿನ ಇಯರು ಪೋನುಗಳು ಬಂದು ಸೇರಿ ಬೇರೆ ಆಟಗಳೇ ನಿಂತವು, ಇತ್ತ ಒಬ್ಬಂಟಿಯಾಗಿ ಕಾರು ಬಿಡುವ ನಾನು ಬದಲಾಗುತ್ತಿರುವ ಪ್ರಪಂಚದಲ್ಲಿ ನಾಯಿಗಳಿಗೂ ಹಾಗೂ ನಾವುಗಳಿಗೂ ಹೆಚ್ಚೇನೂ ವ್ಯತ್ಯಯ ಇಲ್ಲದಿರುವ ವಾಸ್ತವಗಳ ಸುತ್ತ ಹೊಸ ತತ್ವಜ್ಞಾನಗಳ ಸುಳಿವನ್ನು ಜಾನಿಸುವುದೇ ಜಾಸ್ತಿಯಾಗುತ್ತಾ ಬಂತು.

ಮುಂದಿನ ಸಂಚಿಕೆಯಲ್ಲಿ ಈ ಬೀದಿ ನಾಯಿಗಳ ಸಾಮಾಜಿಕ ವ್ಯವಸ್ಥೆಯ ಬಗ್ಗೆ ನಾ ಕಂಡುಕೊಂಡುದರ ಬಗ್ಗೆ  ಬರೆಯುವೆ.   

ನಮಸ್ತೆ

ನಟರಾಜ ಉಪಾಧ್ಯ     

No comments:

Post a Comment